ನಮಸ್ಕಾರ ಗೆಳೆಯರೇ...!
ಸ್ವಲ್ಪ ದಿನಗಳ ನಂತರ, ಸಣ್ಣದೊಂದು ಕವನದೊಂದಿಗೆ...



ನೆಲದ ಮೇಲೆ ನೀರಿಲ್ಲದಿದ್ದಾಗ
ಆಕಾಶದ ಮೋಡವ ನೋಡಿ,
ನೀರಿನ ಕನಸಿನಲ್ಲೇ ದಾಹ
ತೀರಿಸಿಕೊಳ್ಳುವವನು ನಾನು.
ನೀ ನಿರಾಕರಿಸಿದಾಗ
ನಿನ್ನ ಇಲ್ಲಗಳಲ್ಲೇ
ನನ್ನ ಖುಷಿಯ ಉತ್ತರಗಳನ್ನು
ಕಂಡುಕೊಳ್ಳುವೆ...

ತೀರಾ ಸಂಜೆಯಲ್ಲಿ
ತೊರೆದು ಹೋಗುವಾಗ,
ಒಂಚೂರು ಜಾಸ್ತಿ ಇದ್ದು ಹೋಗೆಂದು
ಗೋಗರೆಯುವ ಹೊರತಾಗಿ,
ನನ್ನ ಪ್ರೀತಿಯಲ್ಲಿ ಮೋಹಕ್ಕೆ ಜಾಗವಿಲ್ಲ.

ಎಲ್ಲರೂ ಆಕಾಶದೆತ್ತರದ ನಕ್ಷತ್ರಗಳನ್ನು
ಎದೆಯಲ್ಲಿಟ್ಟುಕೊಳ್ಳುತ್ತಿರುವಾಗ,
ಬರೀ ನೆಲದ ಮೇಲೆ ನಿಂತ
ನೀರಿನ ಪ್ರತಿಬಿಂಬವ
ಮನದ ತುಂಬಾ ಚಿತ್ರಿಸಿಕೊಂಡವನು ನಾನು...!


ಮತ್ತೆ ಮತ್ತೆ ನಿನ್ನೇ ನೋಡಿ,
ಅದ್ಯಾವುದೋ ಕಾರಣಕ್ಕೆ ನೀ ನಕ್ಕಾಗ,
ನಾನೇ ಏನೋ ಕಲ್ಪಿಸಿಕೊಂಡು
ಮುಗುಳ್ನಕ್ಕು, ಮತ್ತೆ ನಿನ್ನೇ ದಿಟ್ಟಿಸಿ
ಜಗವ ಪೂರ್ತಿ ಗೆದ್ದವನಂತೆ
ಸಂಭ್ರಮಿಸಿದವನು ನಾನು...!

-ಶ್ರೀನಿಧಿ ವಿ ನಾ.

1 comment: